Thursday, January 12, 2017

Kannada Play Day - 01/07/17

ಮಹಾ ಜನಗಳೇ, ತಾಯಿ ತಂದೆಯರೆ, ಮತ್ತು ಮಕ್ಕಳೇ,

ಏನಪ್ಪಾ ಇದು ಭಾಷಣ ಶುರುಮಾಡಿದರು ಇವ್ರು ಅಂದ್ಕೊಂಡ್ರಾ? ಇಲ್ಲಪ್ಪಾ, ಸುಮ್ನೆ ಅಷ್ಟೇ!ಹೋದ ಶನಿವಾರ ಏನೇನ್ ಮಾಡಿದ್ವಿ ಅಂತ ಹೇಳೋಕ್ಕೆ ಈ ಇ-ಪತ್ರ ಅಷ್ಟೆ. ಆ ನಡುಗೋ ಚಳಿ ಕಳೆದು ಸ್ವಲ್ಪ ಬೆಚ್ಚಗಾಗೋ ಹಾಗಿರುವಾಗ ಈ ಶನಿವಾರ ಸ್ವಲ್ಪ ಕನ್ನಡ ಕಲಿಬೋದಲ್ವೆ? ಸಂಕ್ರಾಂತಿ ಬೇರೆ! ಒಳ್ಳೆ ಶುಭ ದಿನ!

Anyway, ಶ್ರೀಕಾಂತ್ ಅವರು ಹಿರಿಯ ಮಕ್ಕಳಿಗೆ ಒಂದು ಪ್ರಸಿದ್ಧವಾದ ಪದ್ಯ ಶುರು ಮಾಡಿದರು. ಯಾವುದಪ್ಪ ಅಂದ್ರೆ - 'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?' ಓದುವುದಕ್ಕೂ ಸುಲಭ, ಅರ್ಥ ಆಗುವುದಕ್ಕೂ ಸುಲಭ ಅಂತ. ನಿಮ್ಮ ಮಕ್ಕಳಿಗೆ ಓದಿಕೊಂಡು ಬರಬೇಕು ಅಂತ ತಿಳಿಸಿದ್ದಾರೆ. ಸ್ವಲ್ಪ ಅವರ ಕೈಯಲ್ಲೇ ಓದಿಸಿ. 

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.
ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು.
ನಾಯಿ ಮರಿ ಕಳ್ಳ ಬಂದರೆ ಏನು ಮಾಡುವೆ.
ಕುಂಯ್ ಕುಂಯ್ ಬೌ ಬೌ ಎಂದು ಕೂಗಿ ಓಡಿಸುವೆ.
ನಾಯಿಮರಿ ನಾನು ಹೋಗಿ ತಿಂಡಿ ತರುವೆನು
ನಿನ್ನ ಮನೆಯ ನಾನು ಕಾಯುತಿರುವೆನು.

ಚಿಕ್ಕ ಮಕ್ಕಳಿಗೆ ಮೀನಾ ಅವರು ಹೀಗೆ ತಿಳಿಸಿದ್ದಾರೆ. 
೧. ಎಲ್ಲ ಮಕ್ಕಳು ಅ ಇಂದ ಅಹವರೆಗೂ ಮತ್ತು ಕ ಇಂದ ಜ್ಞವರೆಗೂ ಅಕ್ಷರಗಳನ್ನು ಚಾರ್ಟ್ನಲ್ಲಿ ಓದಿ ಹೇಳಿದರು.
೨. ಎಲ್ಲ ಮಕ್ಕಳಿಗೂ ಚಾರ್ಟ್ ಮೂಲಕ ಅಲ್ಲೊಂದು ಇಲ್ಲೊಂದು ಅಕ್ಷರಗಳನ್ನು ತೋರಿಸಿ ಗುರುತು ಹಿಡಿಯಲು ಹೇಳಿದೆವು. ಎಲ್ಲ ಮಕ್ಕಳು ಚೆನ್ನಾಗಿ ಅಕ್ಷರಗಳನ್ನು ಗುರುತು ಹಿಡಿದರು.
೩. ಚಾರ್ಟ್ ಮೂಲಕ ಎರಡು ಅಕ್ಷರಗಳನ್ನು ತೋರಿಸಿ ಅವರಿಗೆ ಅದನ್ನು ಗುರುತಿಸಿ ಓದಲು ಹೇಳಿದೆವು ಮತ್ತು ಹೇಗೆ ಅದರಿಂದ ಒಂದು ಅರ್ಥಪೂರ್ಣ ಪದವನ್ನು ಮಾಡಬಹುದು ಎಂದು ಹೇಳಿಕೊಟ್ಟೆವು.
೪. ಗಜ, ನರ, ಮರ, ತಳ, ಕದ, ಸರ, ರಸ,ಬಲ, ಎಡ, ವನ ಹೀಗೆ ಅನೇಕ ಎರಡು ಅಕ್ಷರದ ಪದಜೋಡಣೆಯನ್ನು ಮಾಡಿಸಿ ಆ ಪದಗಳ ಅರ್ಥಗಳನ್ನು ಹೇಳಿ ಕೊಟ್ಟೆವು.
೫. ಇದಲ್ಲದೆ ಎರಡು ಅಕ್ಷರಗಳು ಅಲ್ಲಲ್ಲಿ ತೋರಿಸಿ ಅವುಗಳನ್ನು ಗುರುತಿಸಲು ಹೇಳಿದೆವು. ಎಲ್ಲ ಮಕ್ಕಳು ಚೆನ್ನಾಗಿ ಗುರುತಿಸಿ ಹೇಳಿದರು.
೬. ಕೊನೆಯದಾಗಿ ನಾಳೆ ಪ್ರಿಯಾಳ ಹುಟ್ಟು ಹಬ್ಬ ಎಂದು ತಿಳಿದಾಗ, ಎಲ್ಲ ಮಕ್ಕಳಿಗೂ ಅವಳಿಗೆ ಹುಟ್ಟು ಹಬ್ಬದ ಶುಭಾಶಯವನ್ನು ಕನ್ನಡದಲ್ಲಿ ಹೇಳಿಸಿದೆವು.

ಬರುತಿದೆ ಮಕರ ಸಂಕ್ರಾಂತಿ,
ಬೆಳಗಲಿ ನಿಮ್ಮೊಳಗಿನ ಕಾಂತಿ,
ತರಲಿ ಎಲ್ಲರಿಗೂ ಸುಖ ಶಾಂತಿ.

ಹಬ್ಬದ ಶುಭಾಶಯಗಳೊಂದಿಗೆ,

ನಿಮ್ಮವರೇ,
ಕನ್ನಡ ಕಲಿ Team

No comments:

Post a Comment

Note: Only a member of this blog may post a comment.